ರಾಜ್ಯದಲ್ಲಿ ಪೂರ್ವ ಬೇಸಿಗೆ ಅಬ್ಬರ ಜೋರಾಗಿದೆ. ಈ ಹಿಂದಿನ ವರ್ಷಗಳಿಗಿಂತಲೂ ಈ ಬಾರಿ ಉಷ್ಣಾಂಶದಲ್ಲಿ ಏರಿಕೆಯಾಗಿದ್ದು, ಮುಂದಿನ ಒಂದು ವಾರ ಉಷ್ಣಾಂಶನ್ನು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ 3-4 ಡಿಗ್ರಿ ಉಷ್ಣಾಂಶ ಹೆಚ್ಚಾಗುವ ಮೂಲಕ ಜನರನ್ನ ಕಂಗಾಲಾಗಿಸಿದೆ. ಬೇಸಿಗೆಗೂ ಮುನ್ನವೇ ಪರಿಸ್ಥಿತಿ ಹೀಗಾಗಿದ್ದು, ಮುಂಬರುವ ಬೇಸಿಗೆ ದಿನಗಳನ್ನ ಎದುರಿಸೋದು ಹೇಗೆ ಎನ್ನುವ ಆತಂಕ ಶುರುವಾಗಿದೆ. ಈ ಮಧ್ಯೆ ರಾಜ್ಯದಲ್ಲಿ ಮುಂದಿನ ಒಂದು ವಾರ ಬಿಸಿಲಬ್ಬರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದ್ದು, ಸದ್ಯಕ್ಕಿಂತಲೂ 2-3 ಡಿಗ್ರಿ ಉಷ್ಣಾಂಶ ಏರಿಕೆಯಾಗುವ ಸಾಧ್ಯತೆಯಿದೆ.

ಮುಂದಿನ ಒಂದು ವಾರ ಕರಾವಳಿಯಲ್ಲಿ ಗರಿಷ್ಠ ತಾಪಮಾನದ ಜೊತೆಗೆ ಕನಿಷ್ಠ ಉಷ್ಣಾಂಶವೂ ಕೂಡ ಗರಿಷ್ಠ ಉಷ್ಣಾಂಶದ ಮಟ್ಟಕ್ಕೆ ಏರಿಕೆಯಾಗಿದೆ. ಕರಾವಳಿಯಲ್ಲಿ ಕನಿಷ್ಠ ಉಷ್ಣಾಂಶ 23-25 ಡಿಗ್ರಿ ಹಾಗೂ ಗರಿಷ್ಠ ತಾಪಮಾನ 33-34 ಡಿಗ್ರಿ ವ್ಯಾಪ್ತಿಯಲ್ಲಿರುತ್ತದೆ. ಉತ್ತರ ಒಳನಾಡಿನಲ್ಲಿ 34-37 ಡಿಗ್ರಿ, ದಕ್ಷಿಣ ಒಳನಾಡಿನ ಆಗುಂಬೆ, ಬೆಂಗಳೂರು, ಚಿಕ್ಕಮಗಳೂರು, ಹಾಸನ, ಮೈಸೂರು, ಚಿಂತಾಮಣಿ ಮತ್ತು ಮಡಿಕೇರಿಯಲ್ಲಿ 31-33 ಡಿಗ್ರಿ ಇರಲಿದೆ.

ಚಾಮರಾಜನಗರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ ಮತ್ತು ಶಿವಮೊಗದಲ್ಲಿ 34-37 ಇರಲಿದೆ. ಉತ್ತರ ಒಳನಾಡಿನ, ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ಗರಿಷ್ಠ ತಾಪಮಾನ ಸಾಮಾನ್ಯಕ್ಕಿಂತ ಗಮನಾರ್ಹನಾಗಿ ಹೆಚ್ಚಾಗಿದ್ದು, ಉತ್ತರ ಒಳನಾಡಿನ ಬೆಳಗಾವಿ, ವಿಜಯಪುರ, ಧಾರವಾಡ, ಗದಗ ಮತ್ತು ಕಲಬುರಗಿಯಲ್ಲಿ ಸಾಮಾನ್ಯಕ್ಕಿಂತ ಹೆಚ್ಚಾಗಿರುತ್ತದೆ.

ದಕ್ಷಿಣ ಒಳನಾಡಿನ ಬೆಂಗಳೂರು (ಕೆಐಎಎಲ್) ವಿಮಾನ ನಿಲ್ದಾಣ, ದಾವಣಗೆರೆ, ಚಿಂತಾಮಣಿ, ಹಾಸನ ಮತ್ತು ಮೈಸೂರಿನಲ್ಲಿ ಸಾಮಾನ್ಯಕ್ಕಿಂತ ತಾಪಮಾನ ಹೆಚ್ಚಾಗಿರಲಿದೆ. ಕರ್ನಾಟಕದಾದ್ಯಂತ ಮುಂದಿನ 5 ದಿನಗಳವರೆಗೆ ತಾಪಮಾನ, ಉತ್ತರ ಒಳನಾಡಿನಲ್ಲಿ 2-4 ಡಿಗ್ರಿ ಸೆಲ್ಸಿಯಸ್ ಹಾಗೂ ಕರಾವಳಿ, ದಕ್ಷಿಣ ಒಳನಾಡಿನಲ್ಲಿ 2-3 ಡಿಗ್ರಿ ಸೆಲ್ಸಿಯಸ್ ಸಾಮಾನ್ಯಕ್ಕಿಂತ ಹೆಚ್ಚಾಗಿರಲಿದೆ ಎಂದು ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲೂ ಬಿಸಿಲಿನ ಅಬ್ಬರ ಜೋರಾಗುವ ಸಾಧ್ಯತೆ ಇದೆ. ಕಳೆದ 20 ವರ್ಷಗಳ ಬಳಿಕ ಮೊದಲ ಬಾರಿಗೆ ಫೆಬ್ರವರಿಯಲ್ಲಿ 35.5 ಡಿಗ್ರಿ ದಾಖಲಾಗಿತ್ತು. ಆದರೆ ಈ ವರ್ಷ ಈಗಾಗಲೇ 34 ಡಿಗ್ರಿಗೆ ಏರಿಕೆಯಾಗಿದೆ. ಕಳೆದ ಒಂದು ವಾರದಿಂದ 32 ಡಿಗ್ರಿ ದಾಖಲಾಗಿತ್ತು. ಈಗ 34 ರಿಂದ 35 ಡಿಗ್ರಿಗೆ ಏರಿಕೆಯಾಗುವ ಸಾಧ್ಯತೆಯಿದೆ. ಬುಧವಾರ ಕೂಡ ನಗರದಲ್ಲಿ 34 ಡಿಗ್ರಿ ದಾಖಲಾಗಿದ್ದು, ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *