ಬೆಂಗಳೂರು : ಟೆಕ್ಕಿ ಅತುಲ್ ಸುಭಾಷ್ ವಿಡಿಯೋ ಮೂಲಕ ತನ್ನ ಹೆಂಡತಿ, ಮತ್ತಾಕೆಯ ಕುಟುಂಬಸ್ಥರು ನೀಡಿದ ಟಾರ್ಚರ್ ಬಗ್ಗೆ ಎಳೆಎಳೆಯಾಗಿ ವಿವರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಪ್ರಕರಣ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಸದ್ಯ ಇಂತಹದೇ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕಾಡುಬೀಸನಹಳ್ಳಿಯ ಅಪಾರ್ಟ್ಮೆಂಟ್ವೊಂದರ ಫ್ಲ್ಯಾಟ್ನಲ್ಲಿ ನಾಲ್ಕು ದಿನಗಳ ಹಿಂದೆ ಒಡಿಶಾ ಮೂಲದ ಜನಪ್ರಿಯ ರ್ಯಾಪರ್ ಅಭಿನವ್ ಸಿಂಗ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಕುರಿತು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿರುವ ಮಾರತ್ಹಳ್ಳಿ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆದರೆ ಪೊಲೀಸರ ತನಿಖೆಯಲ್ಲಿ ಒಂದೊಂದೆ ಅಂಶಗಳು ಹೊರಗೆ ಬರುತ್ತಿದ್ದು, ಸಾವಿಗೆ ನಿಖರ ಕಾರಣ ಏನೂ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಟೆಕ್ಕಿಯಾಗಿದ್ದ, ಅಭಿನವ್ ಮದುವೆಯಾದಗಿನಿಂದ ಜೀವನದಲ್ಲಿ ಯಾವುದು ಸರಿ ಇರಲಿಲ್ಲವಂತೆ. ಪತಿ ಪತ್ನಿ ನಡುವೆ ಗಲಾಟೆ ಮಾಡಿಕೊಂಡು ಬೇರೆ ಬೇರೆ ಆಗಿದ್ದರೆ. ಈ ನಡುವೆ ಅಭಿನವ್ ವಿರುದ್ಧ ಆತನ ಪತ್ನಿ ನನ್ನ ಮೇಲೆ ಹಲ್ಲೆಯಾಗಿದೆ. ಮಾನಸಿಕ ಕಿರುಕುಳ ನೀಡಿದ್ದಾನೆ ಎಂದು ಒಡಿಶಾದಲ್ಲಿ ಎರಡು ಕೇಸ್ ದಾಖಲು ಮಾಡಿದ್ದಾಳೆ. ಬೆಂಗಳೂರಿನಿಂದ ಒಡಿಶಾಗೆ ತೆರಳಿ ಅಭಿನವ್ ಕೇಸ್ ಸಂಬಂಧ ಹಲವು ಬಾರಿ ವಿಚಾರಣೆಗೆ ಹಾಜರಾಗಿ ಬಂದಿದ್ದ.
ಇದು ಅಭಿನವ್ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿತ್ತು. ಅಂತೆಯೇ ಅಭಿನವ್ ಆತ್ಮಹತ್ಯೆಗೆ ಎರಡು ದಿನ ಮುಂಚೆ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ದೂರು ಅಭಿನವ್ ಪತ್ನಿ ಮತ್ತೆ ದೂರು ನೀಡಿದ್ದಳು. ಇದು ಅಭಿನವ್ ಗೆ ಸಾಕಷ್ಟು ನೋವು ತಂದಿತ್ತು. ಈ ಜಂಜಾಟವೇ ಬೇಡ. ಇದಕ್ಕೆಲ್ಲ ಆತ್ಮಹತ್ಯೆ ಒಂದೇ ಪರಿಹಾರ ಎಂದು ನಿರ್ಧರಿಸಿ ಜೀವ ಕಳೆದುಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳಲು ಅಭಿನವ್ ಸಿಂಗ್ ಅಮೆಜಾನ್ ನಲ್ಲಿ ವಿಷ ಆರ್ಡರ್ ಮಾಡಿದ್ದ. ಬಳಿಕ ಎರಡು ದಿನ ಮನೆಯಲ್ಲಿ ವಿಷ ಇಟ್ಟುಕೊಂಡು ಕಾಯುತ್ತಿದ್ದ. ಆತ್ಮಹತ್ಯೆಗೆ ಶರಣಾಗುವ ದಿನ ಮನೆಯಲ್ಲಿ ಗೆಳೆಯನ ಜೊತೆಗೆ ಭಾರತ ಇಂಗ್ಲೆಂಡ್ ನಡುವಿನ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದ. ಯಾವಾಗ ಗೆಳೆಯ ರಜತ್ ಮನೆಯಿಂದ ವಾಪಸ್ಸು ಹೋಗಿದ್ದಾನೋ ಆಗ ಅಭಿನವ್ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದಾನೆ.
ಅಭಿನವ್ ಸಾವಿಗೂ ಮುನ್ನ ಯಾವುದೇ ಡೆತ್ ನೋಟ್ ಬರೆದಿಲ್ಲ. ಆದರೆ ಆತನ ಕುಟುಂಬಸ್ಥರ ಹೇಳಿಕೆಗಳು ಆತ್ಮಹತ್ಯೆಗೆ ಕಾರಣ ಏನೂ ಎಂಬುದನ್ನು ಸಾರಿಸಾರಿ ಹೇಳುತ್ತಿದೆ. ಹೀಗಾಗಿ ಪ್ರಕರಣದ ಗಂಭೀರತೆ ಅರಿತಿರುವ ಮಾರತ್ ಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.