ಹಿಂದೂ ಧರ್ಮದಲ್ಲಿ ಅತ್ಯಂತ ಪೂಜ್ಯನೀಯ ಹಬ್ಬಗಳಲ್ಲಿ ಮಹಾ ಶಿವರಾತ್ರಿಯೂ ಒಂದು ಹಬ್ಬವಾಗಿದೆ. ಶಿವನಿಗೆ ತುಂಬಾ ಇಷ್ಟವಾದ ಬಿಲ್ವಪತ್ರೆ ಅರ್ಪಿಸಿ, ಈ ಹಬ್ಬವನ್ನು ಅತ್ಯಂತ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ.
ಮಹಾ ಶಿವರಾತ್ರಿಯನ್ನು ಸಾಮಾನ್ಯವಾಗಿ ಫೆಬ್ರವರಿ ಅಥವಾ ಮಾರ್ಚ್ನಲ್ಲಿ ಅಂದರೆ ಫಾಲ್ಗುಣ ಅಥವಾ ಮಾಘ ಮಾಸದಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು ದೇಶದಾದ್ಯಂತ ಕೆಲವು ಸ್ಥಳಗಳಲ್ಲಿ ತಮ್ಮದೇ ಆದ ವಿಶಿಷ್ಟ ಸಂಪ್ರದಾಯಗಳಲ್ಲಿ ಆಚರಿಸುತ್ತಾರೆ.

ಹಿಂದೂ ಧರ್ಮದಲ್ಲಿ ಪ್ರಾಚೀನ ಕಾಲದಿಂದಲೂ ಉಪವಾಸವು ಸಾಮಾನ್ಯ ಅಭ್ಯಾಸವಾಗಿದ್ದು, ಇದು ತಪಸ್ಸು ಮತ್ತು ತ್ಯಾಗದ ಒಂದು ರೂಪವಾಗಿದೆ. ಇದನ್ನು ಹಿಂದೂ ಧರ್ಮದಲ್ಲಿ ಮಾತ್ರವಲ್ಲದೆ ಭಾರತದ ಇತರ ಪ್ರಮುಖ ಧರ್ಮಗಳಾದ ಜೈನ ಧರ್ಮ, ಬೌದ್ಧ ಧರ್ಮ ಮತ್ತು ಸಿಖ್ ಧರ್ಮಗಳಲ್ಲಿಯೂ ಸಹ ಆಚರಿಸಲಾಗುತ್ತದೆ. ಉಪವಾಸವನ್ನು ಮುಖ್ಯವಾಗಿ 2 ಕಾರಣಗಳಿಂದ ಮಾಡಲಾಗುತ್ತದೆ.
ಪ್ರಾಚೀನ ಭಾರತದಲ್ಲಿ, ವಿದ್ಯಾರ್ಥಿಗಳು ಮತ್ತು ಗೃಹಸ್ಥರು ತಮ್ಮ ಕಡ್ಡಾಯ ಕರ್ತವ್ಯಗಳ ಭಾಗವಾಗಿ ಉಪವಾಸದಲ್ಲಿ ತೊಡಗಿಕೊಂಡಿದ್ದರು. ಉಪವಾಸವು ನಮ್ಮ ಮನಸ್ಸು ಮತ್ತು ದೇಹವನ್ನು ಶುದ್ಧೀಕರಿಸುತ್ತದೆ. ಜೊತೆಗೆ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಮುಕ್ತಿಯ ಹಾದಿಯಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ ಎಂಬುದು ನಂಬಿಕೆಯಾಗಿದೆ. ಇನ್ನೂ ದೇವರನ್ನು ಪ್ರಾರ್ಥಿಸಲು ಮತ್ತು ಅನುಗ್ರಹವನ್ನು ಪಡೆಯಲು ಅಥವಾ ಪ್ರಾಯಶ್ಚಿತಕ್ಕಾಗಿ ಉಪವಾಸ ಮಾಡಲಾಗುತ್ತದೆ.

ಶೈವ ಧರ್ಮದಲ್ಲಿ, ಉಪವಾಸವು ಸಾಂಪ್ರದಾಯಿಕವಾಗಿ ಶಿವನ ಆರಾಧನೆಗೆ ಸಂಬಂಧಿಸಿದೆ. ಶಿವನನ್ನು ಪೂಜಿಸಿ ಅವನಿಗೆ ನೈವೇದ್ಯ ಅರ್ಪಿಸುವವರೆಗೆ ಏನನ್ನೂ ತಿನ್ನಬಾರದು ಎಂಬುದು ವಾಡಿಕೆಯಾಗಿದೆ. ಶಿವರಾತ್ರಿಯಂದು ದಿನಪೂರ್ತಿ ಉಪವಾಸ ಮಾಡಿ, ರಾತ್ರಿವೀಡಿ ಶಿವನ ಪೂಜೆ ಮತ್ತು ಶಿವನ ಭಜನೆಯ ಬಳಿಕ ಆಹಾರವನ್ನು ಸೇವಿಸುವುದು ಪದ್ಧತಿಯಾಗಿದೆ.
ಸಾಮಾನ್ಯವಾಗಿ ಶಿವನ ಪೂಜೆ ದಿನನಿತ್ಯವೂ ಮಾಡುತ್ತಾರೆ. ಈ ದಿನ ದೃಢ ಸಂಕಲ್ಪದೊಂದಿಗೆ ಭಕ್ತಿಯಿಂದ ಪೂಜಿಸುವುದಲ್ಲದೇ ಇಷ್ಟಾರ್ಥ ಸಿದ್ಧಿಗಾಗಿ ಉಪವಾಸ ಮಾಡುತ್ತಾ ಪೂಜೆ, ಭಜನೆ ಮಾಡುತ್ತಾರೆ. ಜೊತೆಗೆ ಓಂ ನಮಃ ಶಿವಾಯ ಮಂತ್ರ ಭಜಿಸುತ್ತಾ, ದಿನಪೂರ್ತಿ ಜಪ-ತಪ ಮಾಡುತ್ತಾರೆ. ಅಂದು ಶಿವನಿಗೆ ಹಾಲು, ಮೊಸರು ಇತ್ಯಾದಿಗಳನ್ನು ಅರ್ಪಿಸಿ, ತಾವು ಉಪವಾಸ ಮಾಡಿ ಭಕ್ತಿ ಭಾವದಿಂದಿರುತ್ತಾರೆ.

ಮಹಾ ಶಿವರಾತ್ರಿಯಂದು ಶಿವ ಲೌಕಿಕ ಸಮತಲದಲ್ಲಿ ಸಕ್ರಿಯನಾಗಿರುತ್ತಾನೆ. ಶಿವನ ಪೂಜೆಯಿಂದ ಆತನಲ್ಲಿ ಸುಲಭವಾಗಿ ಮುಕ್ತಿ ಪಡೆಯಬಹುದು ಹಾಗೂ ಪಾಪಗಳನ್ನು ತೊಡೆದುಹಾಕಬಹುದು ಎನ್ನುವುದು ನಂಬಿಕೆಯಾಗಿದೆ. ಶಿವ ಪುರಾಣದ ಪ್ರಕಾರ ಶಿವನನ್ನು ಸರಿಯಾದ ರೀತಿಯಲ್ಲಿ ಪೂಜಿಸಿದರೇ ಸ್ವತಃ ಶಿವನಾಗುತ್ತಾನೆ ಎಂದು ತಿಳಿಸುತ್ತದೆ. ಈ ಮೂಲಕ ದುಃಖ ಸಾಗರದಿಂದ ಮುಕ್ತರಾಗುತ್ತಾರೆ ಎಂದು ದೃಢವಾಗಿ ನಂಬುತ್ತಾರೆ.
ಮಹಾ ಶಿವರಾತ್ರಿಯ ದಿನದಂದು ಶಿವನ ಆರಾಧನೆ ಮೊದಲಿನಿಂದಲೂ ನಡೆದು ಬಂದ ಸಂಪ್ರದಾಯವಾಗಿದೆ. ಶಿವನ ಭಕ್ತರು ತಡರಾತ್ರಿಯವರೆಗೆ ಆತನ ಹೆಸರಿನಿಂದ ಜಾಗರಣೆ ಮಾಡುವ ಮೂಲಕ ಉಪವಾಸವನ್ನು ಆಚರಿಸುವುದು ಪ್ರತೀತಿಯಾಗಿದೆ.