ಮಂಗಳೂರು : ನಿಗೂಢವಾಗಿ ನಾಪತ್ತೆಯಾಗಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಕಿದೆಬೆಟ್ಟು ನಿವಾಸಿ‌, ವಿದ್ಯಾರ್ಥಿ ದಿಗಂತ್ ಪ್ರಕರಣ ಸುಖಾಂತ್ಯ ಕಂಡಿದೆ. ತಾನು ಮನೆಬಿಟ್ಟು ಹೋಗಲು ಕಾರಣವೇನು ಎಂದು ಪೊಲೀಸರ ಮುಂದೆ ದಿಗಂತ್​ ಹೇಳಿದ್ದಾರೆ.

ದ್ಚಿತೀಯ ಪಿಯುಸಿ ಪರೀಕ್ಷೆ ಭಯದಿಂದ ಮನೆಬಿಟ್ಟು ಹೋಗಿರುವುದಾಗಿ ಪೊಲೀಸರಿಗೆ ದಿಗಂತ್​ ಹೇಳಿದ್ದಾರೆ. ಫೆಬ್ರವರಿ 25ರಂದು ನಾಪತ್ತೆಯಾಗಿದ್ದ ದಿಗಂತ್​ ಬರೊಬ್ಬರಿ 10 ದಿನಗಳ ಬಳಿಕ ಉಡುಪಿಯಲ್ಲಿ ಪತ್ತೆಯಾಗಿದ್ದಾರೆ. ದಿಗಂತ್​ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ನಾಪತ್ತೆಯಾದ ದಿನ ಮನೆ ಬಳಿ ರೈಲ್ವೆ ಟ್ರ್ಯಾಕ್​ ಬಳಿ ಹೋಗಿದ್ದ ದಿಗಂತ್, ಅಲ್ಲಿ ಚಪ್ಪಲಿ ಬಿಚ್ಚಿಟ್ಟು ಶೂ ಹಾಕಿಕೊಂಡಿದ್ದಾರೆ. ಬಳಿಕ, ಅಪರಿಚಿತರ ಬೈಕ್​ ಏರಿ ಮಂಗಳೂರಿಗೆ ಹೋಗಿ, ಮಂಗಳೂರಿನಿಂದ ಬಸ್​ ಶಿವಮೊಗ್ಗ ತಲುಪಿ, ಬಳಿಕ ಶಿವಮೊಗ್ಗದಿಂದ ಮೈಸೂರಿಗೆ ಹೋಗಿದ್ದಾರೆ. ಮೈಸೂರಿನಲ್ಲಿ ಟ್ರೈನ್​ ಹತ್ತಿ ಬೆಂಗಳೂರಿಗೆ ಹೋಗಿದ್ದಾರೆ. ನಂದಿಬೆಟ್ಟಕ್ಕೆ ತೆರಳಿ, ಅಲ್ಲಿಯ ಹೊಟೇಲ್​ ಒಂದರಲ್ಲಿ ಮೂರು ದಿನ ಕೆಲಸ ಮಾಡಿ 3000 ಸಂಪಾದನೆ ಮಾಡಿದ್ದಾರೆ. ನಂತರ ವಿವಿಧ ಕಡೆ ಸುತ್ತಾಟ ನಡೆಸಿ, ಶನಿವಾರ (ಮಾ.08) ರಂದು ಬೆಂಗಳೂರಿನಲ್ಲಿ ಮುರುಡೇಶ್ವರ ಎಕ್ಸ್‌ಪ್ರೆಸ್ ಟ್ರೈನ್​ ಹತ್ತಿ ಉಡುಪಿಗೆ ತುಲುಪಿದ್ದಾನೆ.

ಶನಿವಾರ ಬೆಂಗಳೂರಿನಿಂದ ಮುರುಡೇಶ್ವರ ಎಕ್ಸ್‌ಪ್ರೆಸ್‌ ಟ್ರೈನ್​ನಲ್ಲಿ ಹೋಗುವಾಗ ದಿಗಂತ್ ಪೊಲೀಸರ ಕಾರ್ಯಾಚರಣೆ ನೋಡಿದ್ದರು. ರೈಲು ದಿಗಂತ್ ಮನೆ ಸಮೀಪವೇ ಹೋಗುತ್ತೆ. ಮನೆ ಸಮೀಪ ರೈಲು ಬಂದಾಗ, ಕಿಟಕಿ ಬಳಿ ನಿಂತು ದಿಗಂತ್ ತನ್ನ ಮನೆ ಗಮನಿಸಿದ್ದರು. ಈ ವೇಳೆ, ರೈಲು ಹಳಿ ಸುತ್ತಾಮುತ್ತಾ ಡ್ರೋನ್ ಹಾರಾಟ, ಪೊಲೀಸರ ಕೂಂಬಿಂಗ್ ನೋಡಿದ್ದರು. ಪತ್ತೆಯಾದ ಬಳಿಕ‌ ಪೊಲೀಸರಿಗೆ, ಮನೆ ಬಳಿ ಇರುವ ಕೆರೆ ಹತ್ತಿರ ಏನಕ್ಕೆ ಅಗೆಯುತ್ತಿದ್ರಿ, ಹುಡುಕುತ್ತಿದ್ರಿ ಎಂದು ದಿಗಂತ್ ಪ್ರಶ್ನಿಸಿದ್ದಾರೆ.

ದಿಗಂತ್ ನಾಪತ್ತೆ ಹಿಂದೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದವು. ದಿಗಂತ ನಾಪತ್ತೆ ಹಿಂದೆ ಗಾಂಜಾ ವ್ಯಸನಿಗಳ ಕೈವಾಡವಿದೆಯಾ? ಎಂಬ ಅನುಮಾನ ಹುಟ್ಟಿಕೊಂಡಿತ್ತು. ಇಷ್ಟೇ ಅಲ್ಲದೇ, ದಿಗಂತ್​ ಬಂಟ್ವಾಳ ತಾಲೂಕಿನ ಸಜಿಪ ಮೂಲದ ಮಂಗಳಮುಖಿಯ ಜೊತೆಗೆ ಹೋಗಿದ್ದಾನೆ ಎಂದು ವಂದತಿ ಹಬ್ಬಿತ್ತು. ಈ ಎಲ್ಲ ವಂದತಿಗಳಿಂದ ಪೋಷಕರು ಗಾಬರಿಗೊಂಡಿದ್ದರು ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *