ತುಮಕೂರು : ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದ ಕುರಿತ ಪ್ರಶ್ನೆಗೆ 20ರೊಳಗೆ ಉತ್ತರ ಲಭಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ತುಮಕೂರಿನಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಜಿಲ್ಲಾಧ್ಯಕ್ಷರ ನೇಮಕಾತಿ ಆದ ಮೇಲೆ ರಾಜ್ಯಾಧ್ಯಕ್ಷರ ವಿಚಾರ ಗೊತ್ತಾಗಲಿದೆ. ದೆಹಲಿಯಲ್ಲಿ ಪ್ರಕ್ರಿಯೆ ನಡೆಯುತ್ತಿದೆ. ಸದ್ಯವೇ ಕೇಂದ್ರದ ವರಿಷ್ಠರು ರಾಜ್ಯಕ್ಕೆ ಬರಲಿದ್ದಾರೆ. ಎಲ್ಲ ಶಾಸಕರ ಜೊತೆ ಸಮಾಲೋಚನೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತಾರೆ ಎಂದು ನುಡಿದರು.
ಕೇಂದ್ರದ ಶಿಸ್ತು ಸಮಿತಿ ಯತ್ನಾಳರಿಗೆ ನೋಟಿಸ್ ಕೊಟ್ಟಿದೆ. 72 ಗಂಟೆಗಳ ಗಡುವು ಕೂಡ ಇತ್ತು. ಅದಾದ ಮೇಲೆ ಏನಾಗಿದೆ, ಏನಾಗುತ್ತಿದೆ ಎಂಬುದಕ್ಕೆ ಪ್ರತಿಕ್ರಿಯೆ ಕೊಡಲು ಹೋಗುವುದಿಲ್ಲ. ಕೇಂದ್ರದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.
ಯತ್ನಾಳ್ರಿಗೆ ನೋಟಿಸ್ ಕೊಡಲು ತಾಕತ್ತಿಲ್ಲ ಎಂಬ ರಾಜಣ್ಣನವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ರಾಜಣ್ಣನವರು ನಮ್ಮ ಪಕ್ಷದವರಾ? ಅವರು ಕಾಂಗ್ರೆಸ್ ಪಕ್ಷದವರು. ಅವರ ಹೇಳಿಕೆಗೆ ಪ್ರತಿಕ್ರಿಯೆ ಕೊಡಲು ಹೋಗುವುದಿಲ್ಲ ಎಂದರು.