ರಾಜ್ಯದಲ್ಲಿ ಹಕ್ಕಿ ಜ್ವರದ ಆತಂಕ ಎಲ್ಲೆಡೆ ಮನೆ ಮಾಡಿದೆ. ಜನ ಚಿಕನ್ ತಿನ್ನೋಕೆ ಯೋಚನೆ ಮಾಡುವಂತಾಗಿದೆ. ರಾಜ್ಯದಲ್ಲೇ ಮೊಟ್ಟ ಮೊದಲ ಹಕ್ಕಿ ಜ್ವರ ಕಾಣಿಸಿಕೊಂಡ ವರದಹಳ್ಳಿಯಲ್ಲಿ ಮುಂಜಾಗ್ರತಾ ಕ್ರಮಗಳು ಮುಂದುವರೆದಿದೆ. ರೋಗ ಉಲ್ಬಣ ಆಗದಂತೆ ಕೋಳಿಗಳ ಸಾಮೂಹಿಕ ಹತ್ಯೆ ಮಾಡಿ ಪ್ರತಿದಿನವೂ ಸ್ಯಾನಿಟೈಸೇಷನ್ ಮಾಡಲಾಗುತ್ತಿದೆ.

ಚಿಕ್ಕಬಳ್ಳಾಪುರದಲ್ಲಿ 5ನೇ ದಿನವೂ ಸಹ ವರದಹಳ್ಳಿ ಗ್ರಾಮದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಕೋಳಿಗಳ ಹತ್ಯೆ ಮಾಡಿದಂತೆ ಡಿಸ್ ಇನ್‌ಫೆಕ್ಷನ್ ದ್ರಾವಣ ಸಿಂಪಡಿಸಿ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ನಿರಂತರವಾಗಿ ಮೂರು ತಿಂಗಳ ಕಾಲ ಗ್ರಾಮದಲ್ಲಿ ನಿಗಾ ಇಡಲಾಗುತ್ತಿದೆ.

ಮೂರು ತಿಂಗಳು ಕೋಳಿಮುಕ್ತ ಗ್ರಾಮವಾಗಿ ವರದಹಳ್ಳಿ ಇರಬೇಕಿದೆ. ಯಾವುದೇ ಹೊಸ ಕೋಳಿ ಸಾಕಾಣಿಕೆಗೆ ಅವಕಾಶವೇ ಇಲ್ಲ. ಸದ್ಯ 1 ಕಿಮೀ ವ್ಯಾಪ್ತಿಯಲ್ಲಿ ಕಂಟೋನ್ಮೆಂಟ್ ಝೋನ್ ಇದ್ದು.. ಮುಂದಿನ ದಿನಗಳಲ್ಲಿ 10 ಕಿಮೀ ವ್ಯಾಪ್ತಿಯಲ್ಲಿ ಮಾದರಿಗಳನ್ನ ಪ್ರಯೋಗಲಾಯಕ್ಕೆ ಕಳುಹಿಸಿ ವೈರಸ್ ನಿರ್ಮೂಲನೆಗೆ ಮತ್ತಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಕೋಲಾರದಲ್ಲಿ ಹಕ್ಕಿ ಜ್ವರದ ಆತಂಕ ಹಿನ್ನೆಲೆ ಕುಕ್ಕಟೋದ್ಯಮಕ್ಕೆ ಬಿಸಿ ತಟ್ಟಿದ್ದು, ಚಿಕನ್‌ಗೆ ಒಂದಷ್ಟು ಬೇಡಿಕೆ ಕಡಿಮೆಯಾಗಿದೆ. ಚಿಕನ್ ಅಂಗಡಿಗಳು ಖಾಲಿಯಾಗಿದ್ದು ಚಿಕನ್ ಪ್ರಿಯರೆಲ್ಲ ಕುರಿ ಮಾಂಸ ಹಾಗೂ ಮೀನಿನ ಮೊರೆ ಹೋಗಿದ್ದಾರೆ.

ಬಳ್ಳಾರಿ ಜಿಲ್ಲೆಯಲ್ಲೂ ಹಕ್ಕಿ ಜ್ವರ ಆತಂಕ ಮನೆ ಮಾಡಿದ್ದು. ಫಾರಂಗಳಲ್ಲೇ ಕೋಳಿಗಳು ಸಾವಾಗ್ತಿರೋದ್ರಿಂದ ಉತ್ಪಾದನೆ ಕುಂಠಿತಗೊಂಡಿದೆ. ಇದ್ರಿಂದ ಚಿಕನ್ ದರವೂ ಹೆಚ್ಚಾಗಿದೆ. ವಿಜಯಪುರದಲ್ಲೂ ಗ್ರಾಹಕರು ಹಕ್ಕಿ-ಜ್ವರಕ್ಕೆ ಹೆದರಿ ಕೋಳಿ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಚಿಕನ್ ಪ್ರಿಯರೆಲ್ಲ ಕುರಿ ಮಾಂಸ ಹಾಗೂ ಮೀನಿನ ಮೊರೆ ಹೋಗಿದ್ದಾರೆ.

ಹಕ್ಕಿಜ್ವರ ಹಿನ್ನೆಲೆ ಜನ ವಿವಿಧ ಜಿಲ್ಲೆಗಳಲ್ಲಿ ಚಿಕನ್‌ ತಿನ್ನೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಸುಂಟಿಕೋಪ್ಪದಲ್ಲಿ ಸಂತೆ ದಿನವಾದ ಕೋಳಿ ಮಾಂಸದ ಅಂಗಡಿಗಳಲ್ಲಿ ಗ್ರಾಹಕರು ಇಲ್ಲದೇ ಕೆಲ ಅಂಗಡಿಗಳು ಬಿಕೋ ಎನ್ನುತ್ತಿರುವ ದೃಶ್ಯಗಳು ಸಾಮಾನ್ಯವಾಗಿತ್ತು. ನಾಟಿ ಕೋಳಿಗಳಿಗೆ ಬೇಡಿಕೆ ಇರುವುದರಿಂದ ಕೆಲ ಗ್ರಾಹಕರು ನಾಟಿ ಕೋಳಿಯ ಮೊರೆ ಹೋಗುತ್ತಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಯಾವುದೇ ರೀತಿಯ ಹಕ್ಕಿ ಜ್ವರದ ಪ್ರಕರಣ ಪತ್ತೆಯಾಗಿಲ್ಲ. ಆದರೂ ಜನರಲ್ಲಿ ಆತಂಕ ಶುರುವಾಗಿದೆ. ಇದರ ಪರಿಣಾಮ ಚಿಕನ್ ಸೆಂಟರ್‌ಗಳು ಬಿಕೋ ಎನ್ನುತ್ತಿವೆ ಎಂದು ಹೇಳಲಾಗಿದೆ.

Leave a Reply

Your email address will not be published. Required fields are marked *