ಬೆಂಗಳೂರು : ಪುಸ್ತಕ ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ವಿಧಾನಸಭೆ ಸಚಿವಾಲಯವು ಪ್ರಥಮ ಬಾರಿಗೆ ಆಯೋಜಿಸಿರುವ ‘ಪುಸ್ತಕ ಮೇಳ’ಕ್ಕೆ ಭೇಟಿ ನೀಡಿದ ಸಾಮಾನ್ಯ ಜನರು, ನಾಡಿನ ಶಕ್ತಿಸೌಧವನ್ನು ಕಣ್ತುಂಬಿಕೊಂಡರು.
ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಪ್ರವೇಶ ಸೀಮಿತವಾಗಿದ್ದ ವಿಧಾನಸೌಧದ ಆವರಣಕ್ಕೆ, ಮೊದಲ ಬಾರಿಗೆ ಸಾರ್ವಜನಿಕರಿಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಕಾರಣದಿಂದ ಶಾಲಾ, ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ವಿಧಾನಸೌಧಕ್ಕೆ ಬಂದಿದ್ದರು.
ವಿಧಾನಸೌಧದ ಆವರಣದಲ್ಲಿ ಹೂವಿನಿಂದ ಕಂಗೊಳಿಸುತ್ತಿರುವ ಮರಗಳು, ಗಿಡಗಳು, ಹೋರಾಟಗಾರರು, ರಾಜಕೀಯ ನಾಯಕರ ಪ್ರತಿಮೆಗಳ ಎದುರು ವಿದ್ಯಾರ್ಥಿಗಳು, ಸಾರ್ವಜನಿಕರು ನಿಂತು ಮೊಬೈಲ್ನಲ್ಲಿ ಫೋಟೊ ತೆಗೆಸಿಕೊಂಡರು. ವೇದಿಕೆಯಲ್ಲಿ ನಡೆಯುತ್ತಿದ್ದ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.

ವಿಧಾನಸೌಧದ ಆವರಣದಲ್ಲಿ 151 ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದ್ದು, ಪುಸ್ತಕ ಪ್ರಿಯರಿಗೆ ಇದೊಂದು ಹಬ್ಬವಾಗಿದೆ. ಮಳಿಗೆಗಳಿಗೆ ಭೇಟಿ ನೀಡಿ, ತಮ್ಮ ಇಷ್ಟದ ಲೇಖಕರ ಪುಸ್ತಕಗಳನ್ನು ಖರೀದಿಸಿದರು. ಕರ್ತವ್ಯಕ್ಕೆ ನಿಯೋಜಿಸಿರುವ ಪೊಲೀಸ್ ಸಿಬ್ಬಂದಿ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಸಹ ಮಳಿಗೆಗಳಲ್ಲಿ ಪುಸ್ತಕ ವೀಕ್ಷಿಸುತ್ತಿರುವ ದೃಶ್ಯಗಳು ಕಂಡು ಬಂತು. ಬೇರೆ ಭಾಷೆಯಿಂದ ಭಾಷಾಂತರ ಆಗಿರುವ ಪುಸ್ತಕಗಳು ಸಹ ಲಭ್ಯವಿವೆ.
ಪುಸ್ತಕ ಪ್ರದರ್ಶನ, ಸಂವಾದ, ಕವಿಗೋಷ್ಠಿ, ಪುಸ್ತಕ ಬಿಡುಗಡೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಹೊಸ ಪುಸ್ತಕಗಳ ಬಿಡುಗಡೆ ಮಾಡಲು ಮೇಳದಲ್ಲಿ ಒಂದು ಮಳಿಗೆ ಮೀಸಲಿಡಲಾಗಿದೆ. ‘ಪುಸ್ತಕ ಮೇಳದ ಅಂಗವಾಗಿ ವಿಧಾನಸೌಧಕ್ಕೆ ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಲ್ಲಿ ಪ್ರಸಕ್ತ ಸಾಲಿನ ಅನುದಾನದಲ್ಲಿ ₹2 ಲಕ್ಷ ಮಿತಿಯೊಳಗೆ ಶಾಸಕರು ಪುಸ್ತಕ ಖರೀದಿ ಮಾಡಲು ಅವಕಾಶ ನೀಡಲಾಗಿದೆ. ಶಾಸಕರು ಪುಸ್ತಕಗಳನ್ನು ಖರೀದಿಸಿ ಆಯಾ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಶಾಲಾ-ಕಾಲೇಜುಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ’.