ವಿಜಯಪುರ : ವಿಜಯಪುರ-ಹುಬ್ಬಳ್ಳಿ ಮತ್ತು ವಿಜಯಪುರ-ಬೆಳಗಾವಿ ಹೆದ್ದಾರಿಯನ್ನು ಷಟ್ಪಥ ಅಂದರೆ 6 ಲೈನ್ ಮಾರ್ಗವಾಗಿ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್ ಬರೆದಿದ್ದ, ಪತ್ರಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಜ.15, 2025 ರಂದು ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದ ಸುನೀಲಗೌಡ ಪಾಟೀಲ, ವಿಜಯಪುರ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹೆದ್ದಾರಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವಿಜಯಪುರದಿಂದ ಹುಬ್ಬಳ್ಳಿ ಮತ್ತು ವಿಜಯಪುರದಿಂದ ಬೆಳಗಾವಿಗೆ ಈಗ ಇರುವ ಹೆದ್ದಾರಿಯನ್ನು ಮೇಲ್ದರ್ಜೆಗೆ ಏರಿಸುವುದು ಅಗತ್ಯವಾಗಿದೆ. ಈಗ ಇರುವ ಹೆದ್ದಾರಿಯನ್ನು ಆರು ಪಥದ ರಸ್ತೆಯಾಗಿ ಅಭಿವೃದ್ಧಿ ಪಡಿಸಬೇಕು ಎಂದು ಒತ್ತಾಯಿಸಿದ್ದರು.

ಉತ್ತರ ಕರ್ನಾಟಕದ ಕೇಂದ್ರ ಭಾಗದಲ್ಲಿರುವ ಐತಿಹಾಸಿಕ ವಿಜಯಪುರ ಜಿಲ್ಲೆ ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಇಲ್ಲಿರುವ ಪ್ರಾಚೀನ ಸ್ಮಾರಕಗಳು, ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳು ದೇಶವಷ್ಟೇ ಅಲ್ಲ, ವಿದೇಶಗಳಲ್ಲಿಯೂ ಹೆಸರುವಾಸಿಯಾಗಿವೆ. ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿರುವ ಈ ಜಿಲ್ಲೆಯಿಂದ ಹುಬ್ಬಳ್ಳಿ ಮತ್ತು ಬೆಳಗಾವಿ ಸಂಪರ್ಕಿಸುವ ಹೆದ್ದಾರಿಗಳು ಕಿರಿದಾಗಿದ್ದು, ವಾಹನಗಳ ಸಂಚಾರಕ್ಕೆ ಹೆಚ್ಚು ಸಮಯ ತಗಲುತ್ತಿದೆ. ಇದರಿಂದ ಆರ್ಥಿಕತೆಗೂ ಹಿನ್ನಡೆಯಾಗಿದೆ.

ಈ ಹೆದ್ದಾರಿಗಳನ್ನು ಆರು ಪಥಕ್ಕೆ ಅಗಲೀಕರಣ ಮಾಡುವುದರಿಂದ ಸರಕು ಸಾಗಾಣಿಕೆಗೆ ಅನುಕೂಲವಾಗಲಿದ್ದು, ಸುರಕ್ಷತೆಯ ಜೊತೆಗೆ ಸಂಚಾರಕ್ಕೆ ಸಮಯವೂ ತಗ್ಗಲಿದೆ. ಜೊತೆಗೆ ಆರ್ಥಿಕ ನಗರಗಳಾದ ಹುಬ್ಬಳ್ಳಿ ಮತ್ತು ಬೆಳಗಾವಿಗಳ ಜೊತೆ ವಾಣಿಜ್ಯ ವ್ಯವಹಾರವೂ ವೃದ್ಧಿಸಿ ಪ್ರವಾಸೋದ್ಯಮದ ಅವಕಾಶವನ್ನೂ ಹೆಚ್ಚಿಸಲಿದೆ. ಉದ್ಯೋಗ ಸೃಷ್ಠಿ, ಯುವಕರಲ್ಲಿ ಕೌಶಲ್ಯಾಭಿವೃದ್ಧಿ ಹೆಚ್ಚಳ, ಹೊಸ ಕೈಗಾರಿಕೆಗಳ ಸ್ಥಾಪನೆ, ಆರೋಗ್ಯ, ಶಿಕ್ಷಣ ಮತ್ತಿತರ ಕ್ಷೇತ್ರಗಳಿಗೂ ಇದರಿಂದ ಲಾಭವಾಗಲಿದೆ. ಹೀಗಾಗಿ ಈ ಬೇಡಿಕೆಗೆ ಸ್ಪಂದಿಸಿ ತಮ್ಮ ಅವಧಿಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಹಾಗೂ ಈ ಭಾಗದಲ್ಲಿ ಅನುಕೂಲ ಮಾಡಿಕೊಡುವಂತೆ ಶಾಸಕರು ಪತ್ರದಲ್ಲಿ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದರು.

ಈ ಪತ್ರಕ್ಕೆ ಸ್ಪಂದಿಸಿರುವ ಸಚಿವ ನಿತಿನ್ ಗಡ್ಕರಿ ಬೇಡಿಕೆ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅವರ ಉತ್ತರಕ್ಕೆ ಕೃತಜ್ಞತೆ ಸಲ್ಲಿಸಿರುವ ಶಾಸಕ ಸುನೀಲಗೌಡ ಪಾಟೀಲ, ಸಚಿವರು ವಿಜಯಪುರ-ಹುಬ್ಬಳ್ಳಿ ಮತ್ತು ವಿಜಯಪುರ- ಬೆಳಗಾವಿ ಹೆದ್ದಾರಿಗಳನ್ನು ಆದಷ್ಟು ಬೇಗ ಷಟ್ಪಥ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸುವ ವಿಶ್ವಾಸವಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *