ಬೆಂಗಳೂರು : ಕಾಂಗ್ರೆಸ್ ಮುಖಂಡ ಹೈದರ್ ಅಲಿ ಮರ್ಡರ್ ಪ್ರಕರಣದ ಬಂಧಿತ ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿಗಳು ಹೊರಬರುತ್ತಿದೆ. ಶಿವಮೊಗ್ಗದಿಂದ ಗಡಿಪಾರು ಆಗಿದ್ದ ನಾಲ್ವರು ಆರೋಪಿಗಳನ್ನ ಕರೆಸಿ ಸುಪಾರಿ ಕೊಟ್ಟು ಕೊಲೆ ಮಾಡಿಸಿರೋ ಬಗ್ಗೆ ಒಂದಷ್ಟು ಪುರಾವೆಗಳು ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ.
ಬಂಧಿತ 7 ಮಂದಿ ಆರೋಪಿಗಳಲ್ಲಿ ಮತೀನ್, ಸದ್ದಾಂ ಸೇರಿ ನಾಲ್ವರು ಆರೋಪಿಗಳು ಶಿವಮೊಗ್ಗದವರಾಗಿದ್ದು, ಆರೋಪಿಗಳ ವಿರುದ್ಧ ಶಿವಮೊಗ್ಗದ ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದೆ. ನಿರಂತರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಕಾರಣ ಆರೋಪಿಗಳನ್ನ ಶಿವಮೊಗ್ಗದಿಂದ ಗಡಿಪಾರು ಮಾಡಲಾಗಿತ್ತು.
ಆರೋಪಿಗಳಿಗೆ ಶಿವಮೊಗ್ಗದಿಂದ ಗಡಿಪಾರು ಮಾಡಿದ್ದ ಕಾರಣ ಬೆಂಗಳೂರಿನಲ್ಲಿ ಬಂದು ವಾಸವಾಗಿದ್ದರು. ಈ ಹಿಂದೆ ಕೊಲೆಯಾದ ಹೈದರ್ ಅಲಿ ಆಪ್ತನಿಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಆಗ ಆರೋಪಿಗಳಿಗೆ ಹೈದರ್ ಅಲಿ ಬೆದರಿಕೆ ಹಾಕಿದ್ದ. ಆದ್ದರಿಂದ ಆರೋಪಿಗಳಿಗೆ ಹೈದರ್ ಮೇಲೆ ವೈಷ್ಯಮ್ಯ ಇತ್ತು. ಈ ವಿಚಾರ ತಿಳಿದಿದ್ದ ಪ್ರಕರಣದ ಪ್ರಮುಖ ಆರೋಪಿ ನಯಾಜ್ ಪಾಷಾ ಆರೋಪಿಗಳನ್ನ ಬಳಸಿಕೊಂಡು ಹೈದರ್ ಅಲಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾನೆಂದು ತಿಳಿದು ಬಂದಿದೆ.
ನಾಜ್ ಮತ್ತು ಹೈದರ್ ಅಲಿ ದಶಕಗಳಿಂದ ಒಬ್ಬರ ಮೇಲೆ ಒಬ್ಬರು ಕತ್ತಿ ಮಸೆಯುತ್ತಿದ್ದರು. ಮೃತ ಹೈದರ್, ನಾಜ್ನನ್ನ ಕೊಲೆ ಮಾಡಲು ಪ್ಲಾನ್ ಮಾಡಿಕೊಂಡಿದ್ದಾನೆಂಬ ವಿಚಾರ ತಿಳಿದ ಆರೋಪಿ ನಾಜ್, ಹೈದರ್ಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿದೆ ಎಂದು ಹೇಳಲಾಗಿದೆ.