ಬೆಂಗಳೂರು : ಮೈಸೂರಿನ ಉದಯಗಿರಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧವೇ ಸಚಿವ ರಾಜಣ್ಣ ಅವರು ತೀವ್ರ ಗರಂ ಆಗಿದ್ದಾರೆ.
ಈ ಪ್ರಕರಣ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರಿಗೆ ಕನಿಷ್ಠ ಸಾಮಾನ್ಯ ಇಲ್ಲವೇ? ಆರೋಪಿ ಬಂಧನದ ನಂತರ ನಡೆದ ಎಲ್ಲಾ ಘಟನೆಗಳಿಗೆ ಪೊಲೀಸರೇ ಕಾರಣ ಎಂದು ಕಿಡಿಕಾರಿದರು.
ಯಾರೋ ಒಬ್ಬ ಈ ಕೃತ್ಯ ಎಸಗಿದ್ದಾನೆ. ಕಾನೂನು ಪ್ರಕಾರ ಅವನು ಮಾಡಿದ್ದು ತಪ್ಪು. ಹೀಗಾಗಿ ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧಿತನನ್ನು ಉದಯಗಿರಿ ಪೊಲೀಸ್ ಠಾಣೆಯಲ್ಲೇಕೆ ಇಡಬೇಕಿತ್ತು? ಉದಯಗಿರಿ ಪ್ರದೇಶ ಮುಸ್ಲಿಮರು ಹೆಚ್ಚಿರುವ ಸ್ಥಳ. ಸಹಜವಾಗಿ ಜನ ಒಟ್ಟಾಗಿ ಸೇರಿದ್ದಾರೆ. ಗಲಾಟೆ ಮಾಡಿದ್ದಾರೆಂದು ಹೇಳಿದ್ದಾರೆ.
ಪೊಲೀಸರಿಗೆ ಉದಯಗಿರಿ ಠಾಣೆ ಬದಲು ಬೇರೆ ಠಾಣೆಯಲ್ಲಿ ಇಡಲು ಏನಾಗಿತ್ತು? ಅಷ್ಟು ಕಾಮನ್ ಸನ್ಸ್ ಇಲ್ಲವೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲಸಕ್ಕೆ ಬಾರದವರು, ದಾರಿಹೋಕರಿಗೂ ಗೊತ್ತಿರುವಂತಹ ಪ್ರಾಥಮಿಕ ವಿಚಾರ ದೊಡ್ಡ ದೊಡ್ಡ ಬ್ಯಾಡ್ಜ್ ಹಾಕಿಕೊಂಡು ಹಿಂದೆ-ಮುಂದೆ ಹತ್ತಾರು ಸಿಬ್ಬಂದಿಗಳನ್ನು ಇಟ್ಟುಕೊಂಡು ಓಡಾಡುತ್ತಿರುವ ಪೊಲೀಸರಿಗೆ ಗೊತ್ತಾಗದೇ ಇರುವುದು ವಿಷಾದಕರ ಎಂದು ತಿಳಿಸಿದರು.