ಬೆಂಗಳೂರು : ಸಿನಿಮಾ ಇಲ್ಲದೇ ಬದುಕುವ ಶಕ್ತಿ ನಮಗೆ ಇದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು. ʼನಟ್ಟು, ಬೋಲ್ಟು ಟೈಟುʼ ಹೇಳಿಕೆಗೆ ಚಿತ್ರರಂಗ ಟೀಕೆ ಮಾಡುತ್ತಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ. ಅವರು ಟೀಕೆ ಮಾಡಲಿ ಅಂತಾನೇ ಹೇಳುತ್ತಿದ್ದೇನೆ. ಅವರಿಗೆಲ್ಲಾ ಎಷ್ಟು ಸಹಾಯ ಮಾಡಿದ್ದೇನೆ ಎಂದು ನನಗೂ ಗೊತ್ತಿದೆ, ಸಹಾಯ ಮಾಡಿಸಿಕೊಂಡವರಿಗೂ ಗೊತ್ತಿದೆ ಎಂದರು.
ಇದು ರಾಜ್ಯದ ಹಣ, ನೆಲ, ಜಲ, ನಿಮ್ಮ ಭಾಷೆ. ಈಗ ಅಂತಾರಾಷ್ಟ್ರೀಯ ಫಿಲಂ ಫೆಸ್ಟಿವಲ್ ಮಾಡಿರುವುದು ಅವರ ಚಿತ್ರ ಬೆಳೆಯಲಿ ಎಂದು. ಅವರ ಚಿತ್ರಗಳಿಗೆ ಪ್ರಚಾರ ಅವ್ರು ಮಾಡದೇ ನಾವು ಬೆಳಗ್ಗೆ ಸಂಜೆ ಮಾಡೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ನಾಗಾಭರಣ ಅವರನ್ನು ಆಹ್ವಾನ ಮಾಡದೇ ಇರುವ ಬಗ್ಗೆ ಪ್ರತಿಕ್ರಿಯಿಸಿ, ನಾಗಾಭರಣ ಅವರಿಗೆ ಆಮಂತ್ರಣ ಕೊಡದೇ ಇರಬಹುದು. ಇದರಲ್ಲಿ ಇಲಾಖೆಯ ತಪ್ಪಿದೆಯೋ ಗೊತ್ತಿಲ್ಲ. ಆದರೆ ಕಾರ್ಯಕ್ರಮ ಅವರದ್ದು. ನನಗೆ ಗೊತ್ತು ಅವರು ಟೀಕೆ ಮಾಡುತ್ತಾರೆ ಎಂದು. ಅವರು ಟೀಕೆ ಮಾಡಿದರೂ ನನಗೇನೂ ಬೇಜಾರಿಲ್ಲ. ನಾವು ತಪ್ಪು ಮಾಡಿದ್ದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಅವ್ರು ತಪ್ಪು ಮಾಡಿದ್ರೆ ಅವ್ರು ಸರಿ ಮಾಡಿಕೊಳ್ಳಲಿ ಎಂದರು. ಫಿಲಂ ಇಲ್ಲದೇ ಬದುಕುವ ಶಕ್ತಿ ನಮಗೆ ಇದೆ. ಆದರೆ ಅವರಿಗೆ ಫಿಲಂ ಪ್ರಮೋಷನ್ಗೆ ಜನರೂ ಬೇಕು, ಸರ್ಕಾರವೂ ಬೇಕು ಎಂದು ಹೇಳಿದರು.