ಹಾಸನ : ಫೋಟೋಶೂಟ್ ಮಾಡುವ ವೇಳೆ 19 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ದುಃಖಕರ ಘಟನೆ ಹಾಸನ ತಾಲ್ಲೂಕಿನ ಹಾಲುವಾಗಿಲು ಗ್ರಾಮದಲ್ಲಿ ನಡೆದಿದೆ.
ನಾಗೇಂದ್ರ (19), ಖಾಸಗಿ ಚಿನ್ನಾಭರಣ ಮಳಿಗೆಯಲ್ಲಿ ಪ್ರಮೋಟರ್ ಆಗಿ ಕೆಲಸ ಮಾಡುತ್ತಿದ್ದನು. ನಗರದ ಹೊರವಲಯದಲ್ಲಿ, ನಿನ್ನೆ ಕೆಲಸ ಮುಗಿಸಿದ ನಂತರ, ನಾಗೇಂದ್ರ ಮತ್ತು ಅವನ ಸ್ನೇಹಿತ ಮಂಜುನಾಥ್ ಹಾಲುವಾಗಿಲು ಬಳಿ ಹರಿಯುವ ನೀರನ್ನು ನೋಡಲು ತೆರಳಿದ್ದರು. ಫೋಟೋಶೂಟ್ ಮಾಡುವ ವೇಳೆ, ನಾಗೇಂದ್ರ ಕಾಲು ಜಾರಿ ಕಟ್ಟೆಗೆ ಬಿದ್ದಿದ್ದಾನೆ. ಕೂಡಲೇ ಸ್ನೇಹಿತನ ರಕ್ಷಣೆಗೆ ಮಂಜುನಾಥ್ ಮುಂದಾದರು ಸಾಧ್ಯವಾಗಿಲ್ಲ. ಅದೃಷ್ಟವಶಾತ್ ಮಂಜುನಾಥ್ ಅಪಾಯದಿಂದ ಪಾರಾಗಿದ್ದಾನೆ.
ಈ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಪೊಲೀಸರು ಹಾಗೂ ಅಗ್ನಿಶಾಮಕದಳದ ಸಿಬ್ಬಂದಿ ರಾತ್ರಿ ಆಗಿರುವುದರಿಂದ ವಾಪಾಸ್ ಆಗಿದ್ದರು. ಇಂದು ಬೆಳಿಗ್ಗೆಯಿಂದ ನಾಗೇಂದ್ರ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.