ಬೀದರ್ : ನಿಮಗೂ ವಯಸ್ಸಾಗಿದೆ, ನಿಮ್ಮ ಅಧ್ಯಕ್ಷ ಸ್ಥಾನ ಮುಗಿಯುವಷ್ಟರಲ್ಲಿ ದಲಿತ ಸಿಎಂ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಸವಾಲು ಹಾಕಿದ್ದಾರೆ.
ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಿನಗೂಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಯಾರಿಗೂ ಸಂಬಳ ಬಂದಿಲ್ಲ. ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಇಲ್ಲಿಯವರೆಗೂ 14 ಸಾವು, 35 ಸಾವಿರ ಕೋಟಿ ರೂ, ನುಂಗಿ ನೀರು ಕುಡಿದಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ಮೋಸ ಮಾಡುತ್ತಿದೆ. ಸಿದ್ದರಾಮಯ್ಯವರೇ ಇದೇನಾ ಸಾಮಾಜಿಕ ನ್ಯಾಯ? ಇದು ನ್ಯಾಯ ಅಲ್ಲ, ಅನ್ಯಾಯವಾಗಿದೆ. 7 ಲಕ್ಷ ಕೋಟಿ ರೂ.ಯ ಬಜೆಟ್ ಮಾಡುತ್ತಿದ್ದೀರಿ, ನೀವು ಜಿಲ್ಲೆಗೆ 60 ಸಾವಿರ ಕೋಟಿ ರೂ. ಅನುದಾನ ಕೊಡಬೇಕು. ಅಹಿಂದ ನಾಯಕರಿಂದ ಮಹಾ ಮೋಸವಾಗಿದೆ. ದಲಿತ ಸಚಿವರಿಗೆ ಮಾನ ಮರ್ಯಾದೆ ಇಲ್ಲ. ರಾಜೀನಾಮೆ ಕೊಟ್ಟು ಹೊರಗೆ ಬರಬೇಕು ಎಂದು ಕಿಡಿಕಾರಿದರು.
ಎರಡು ವರ್ಷದಲ್ಲಿ ಒಂದೇ ಒಂದು ಅಭಿವೃದ್ಧಿ ಕೆಲಸಗಳು ಆಗಿಲ್ಲ. ಖರ್ಗೆಯನ್ನು ಕಾಂಗ್ರೆಸ್ ಅಧ್ಯಕ್ಷ ಮಾಡಿದ್ದು ಯಾಕೆ? ಖರ್ಗೆಯನ್ನು ಮುಳಗುವ ಹಡಗಿನ ಅಧ್ಯಕ್ಷ ಮಾಡಿದ್ದಾರೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಸರ್ವಾಧಿಕಾರಿಗಳು. ಖರ್ಗೆ ನಿಮ್ಮಗೆ ತಾಕತ್ತಿದ್ದರೆ, ರಾಜ್ಯದಲ್ಲಿ ದಲಿತ ಸಿಎಂ ಮಾಡಿ, ನಿಮಗೂ ವಯಸ್ಸಾಗಿದೆ ಅಧ್ಯಕ್ಷ ಸ್ಥಾನ ಮುಗಿಯುವಷ್ಟರಲ್ಲಿ ದಲಿತ ಸಿಎಂ ಮಾಡಿ ಎಂದು ಸವಾಲ್ ಹಾಕಿದ್ದಾರೆ. ನಿಮ್ಮ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಕೊಡುತ್ತೇನೆ ಎಂದು ಹೇಳಿದ್ದೀರಿ, ನೀವು ಆದೇಶ ಜಾರಿ ಮಾಡಿ, ಇಲ್ಲಿರುವವರಿಗೆ ದಲಿತರು ಮೇಲೆ ಬರುವುದು ಬೇಕಿಲ್ಲ ಎಂದು ಆಕ್ರೋಶ ಹೊರಹಾಕಿದರು.